ಶನಿವಾರ, ಫೆಬ್ರವರಿ 28, 2009

ಆಟ


'ಆ ಪೇಂಟಿಂಗ್ ನೋಡಿದರೆ ನಿಂಗೆ ಏನು ಕಾಣಿಸುತ್ತದೆ?'
'ದೊಡ್ಡ ಚೌಕ. ಒಳಗೆರಡು ಒಂದರ ಕೆಳಗೊಂದು ತ್ರಿಭುಜ. ಅದರ ಮದ್ಯೆ ವೃತ್ತದಲ್ಲಿ ಕೆಂಪು ಬಣ್ಣ...ನನಗೆ ಸ್ಕೂಲಿನಲ್ಲಿ ಓದಿದ ಯಾವುದೋ ಥಿಯರಂ ನೆನಪಾಗುತ್ತಿದೆ.'
'ಯೇ... ಹೋಗೋ...ನನಗೆ ಪುಟ್ಟ ಹುಡುಗಿಯೊಬ್ಬಳು ದೊಡ್ಡ ಕುಂಕುಮ ಇಟ್ಟುಕೊಂಡು ತನ್ನ ಅಮ್ಮನಂಥಾಗುವ ಪ್ರಯತ್ನದಲ್ಲಿದ್ದಾಳೆ ಎನಿಸುತ್ತಿದೆ.'
'ನಿನ್ ತಲೆ...ಅಲ್ಲಿ ಹುಡುಗಿ ಎಲ್ಲಿದ್ದಾಳೆಯೇ? ಓಹ್, ಸರಿ ಸರಿ... ಈಗ ಅರ್ಥವಾಯಿತು. ಹಾಗಾದರೆ ಈ ಪೇಂಟಿಂಗ್ ನೋಡಿದರೆ ಏನನ್ನಿಸುತ್ತದೆ ಹೇಳು?'
ಇದು ನಮ್ಮ ನಿತ್ಯದ ಆಟ. ಆಟವಾಡಲು ಪೇಂಟಿಂಗೇ ಬೇಕೆಂದಿಲ್ಲ. ನೀಲಾಕಾಶದ ಮೋಡಗಳು, ಟೇಬಲ್ ಮೇಲೆ ಚೆಲ್ಲಿದ ಕಾಫಿ ಕಲೆ , ಬಾತ್‌ರೂಮಿನ ಟೈಲ್ಸ್ ಮೇಲಿನ ಅಸ್ಪಷ್ಟ ಆಕಾರಗಳು, ಅಂಗೈ ಮೇಲಿನ ಗೆರೆಗಳು, ಒಂಟಿ ನಿಂತ ಮರದ ನಿಲುವು, ಹರಡಿದ ಮರದ ಬಿಳಲು, ಹೀಗೆ ಏನಾದರೂ ಆಗುತ್ತಿತ್ತು. ಕೊನೆಗೆ ಪಾರ್ಕಿನ ಬೆಂಚಿನ ಮೇಲೆ ಅಂಟಿರುವ ಪಾರಿವಾಳದ ಹಿಕ್ಕೆಯನ್ನೂ ಬಿಟ್ಟಿದ್ದಿಲ್ಲ. ಆದರೆ ಅನಿಸಿದ್ದನ್ನು ಹೇಳದೇ ಇರುವಂತಿರಲಿಲ್ಲ. ಚನ್ನಾಗಿ ಹೇಳಿದವರಿಗೆ ಮೆಚ್ಚುಗೆಯ ನೋಟವೊಂದು ಸಂದಾಯವಾಗುತ್ತಿತ್ತು. ಆಟ ಮತ್ತೆ ಮುಂದುವರಿಯುತ್ತಿತ್ತು.
ನನಗೋ ಆತನನ್ನು ಒಮ್ಮೆಯಾದರೂ ಸೋಲಿಸಬೇಕೆಂಬ ಹಂಬಲ. ಉಹ್ಹೂಂ... ಆತ ಸೋತಿದ್ದಿಲ್ಲ.
ಒಮ್ಮೆ ಮಾತ್ರ ಅದೇನಾಯಿತೋ ನಂಗೆ. ನಾನೇ ನೇರವಾಗಿ ಎದುರಿಗೆ ಹೋಗಿ ನಿಂತೆ. 'ನಿನಗೇನನಿಸತ್ತೆ ಹೇಳು?' ಎಂದೆ. ಆತ ನೋಡುತ್ತಲೇ ನಿಂತ. ಹೇಳಲಿಲ್ಲ. ನಾನು ಕಾಯುತ್ತಲೇ ನಿಂತೆ. ಸೋಲಲಿಲ್ಲ. ಆತ ಸೋತ. ಸೋತೇ ಹೋದ. ಸೋತು ತಲೆ ತಗ್ಗಿಸಿದ. ಆದರೂ ನಾನು ಗೆಲ್ಲಲಿಲ್ಲ!

ಸೋಮವಾರ, ಫೆಬ್ರವರಿ 23, 2009

ವಾಸ್ತವದ ಮುಖವಾಡ


'ರಿಯಾಲಿಟಿ ಶೋ' ಎಂಬ 'ವಾಸ್ತವ ಬದುಕಿನ ಚಿತ್ರಣ' ನೀಡುವ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗಲಿವೆ ಎಂದಾಗ ಅಲ್ಲಿ ಮನುಷ್ಯನ ನಿಜವಾದ ಮುಖ ಕಾಣುತ್ತದೆ ಎಂದು ಕೆಲವರಾದರೂ ಅಂದುಕೊಂಡಿರಬಹುದು. . ಆದರೆ ಇಂದು ರಿಯಾಲಿಟಿ ಶೋ ಎನ್ನುವುದು ಕೇವಲ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಮಾತ್ರವೇ ಆಗಿಉಳಿದಿಲ್ಲ, ಅದರ ಹಿಂದು ಮುಂದಿನ ನಾಟಕಗಳೂ (ಕ್ಷಮಿಸಿ, ಘಟನೆಗಳೂ) ಅದರಲ್ಲಿ ಸೇರಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಜನಗಳ ಮುಖ ಕಾಣಿಸದಿದ್ದರೂ ಮುಖವಾಡಗಳಂತೂ ಸ್ಪಷ್ಟವಾಗಿ ಕಾಣುತ್ತವೆ.
ಉದಾಹರಣೆಗೆ 'ಬಿಗ್ ಬ್ರದರ್'ನ ಶಿಲ್ಪಶೆಟ್ಟಿ ಮತ್ತು ಜೇಡ್ ಗೂಡಿ ಪ್ರಸಂಗ. ಜೇಡ್ ಗೂಡಿ ಕಾರ್ಯಕ್ರಮದಲ್ಲಿ ಶಿಲ್ಪಳನ್ನು ಮೂದಲಿಸಿದ್ದಕ್ಕೆ ಶಿಲ್ಪ ಕಾರ್ಯಕ್ರಮದ ಹೊರಗೂ ಅತ್ತಳು. ಹಾಗೆ ಅತ್ತಿದ್ದಕ್ಕೆ ಗೆಲುವಿನ ಬಹುಮಾನ ಕಾರ್ಯಕ್ರಮದಲ್ಲಿ ಸಿಕ್ಕಿತು. (ಹೊರಗಡೆಯೂ ಸಿಗುತ್ತಿದೆ!) ಜೇಡ್ ಗೂಡಿ ಕಾರ್ಯಕ್ರಮದಾಚೆಯೂ ಖಳನಾಯಕಿಯಾದಳು. ಜತೆಗೇ ಪ್ರಚಾರವೂ ಹೆಚ್ಚಿ ಅವಳ ಪಾತ್ರದ ಬೆಲೆಯೂ ಹೆಚ್ಚಾಯಿತು. ಈಗ ಅದೆಲ್ಲಾ ಫ್ಲಾಶ್‌ಬ್ಯಾಕ್.
ಆ ಖಳನಾಯಕಿಗೀಗ ಕ್ಯಾನ್ಸರ್. ಸಾವು ಬದುಕಿನ ಮಧ್ಯದಲ್ಲಿ ಗೂಡಿ ಇದ್ದಾಳೆ. ಈಗಲೂ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾಳೆ. ಅಷ್ಟೇ ಆಗಿದ್ದರೆ ಅದು ಆಕೆಯ ಜೀವನೋತ್ಸಾಹ, ಮರಣ ಮುಂದೂಡುವ-ಮರೆಯುವ ಪ್ರಯತ್ನ ಎನ್ನಿಸಿ, ನಾವೂ ಚಿಯರ್‌ಅಪ್ ಎನ್ನಬಹುದಿತ್ತು. ಆದರೆ ಆಕೆ ಮಾಧ್ಯಮಗಳ ಎದುರಿಗೆ ಪದೇ ಪದೆ 'ಬಹುಶಃ ನಾನು ಕ್ಯಾಮೆರಾ ಮುಂದೆಯೇ ಸಾಯಬಹುದು' ಎಂದು ಸಾರುತ್ತಿರುವುದನ್ನು ನೋಡಿದರೆ ಈಕೆ ತಾನು ಜಾಹೀರಾತು ನೀಡುತ್ತಿರುವುದು ತಾನು ಸಾಯುವುದಕ್ಕೋ ಅಥವಾ ಭಾಗವಹಿಸುವ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವುದಕ್ಕೋ ಗೊತ್ತಾಗುತ್ತಿಲ್ಲ. ಆ ರಿಯಾಲಿಟಿ ಶೋನಲ್ಲೇ ಆಕೆ ಸತ್ತರೆ (ಹಾಗಾಗದಿರಲಿ)ಅದನ್ನ ಎಷ್ಟು ಹೃದಯವಿದ್ರಾವಕವಾಗಿ ತೋರಿಸಬಹುದೆಂದು ಆ ಕಾರ್ಯಕ್ರಮದ ಆಯೋಜಕರು, ಆಗ ಹೇಗೆ ದುಃಖ ವ್ಯಕ್ತಪಡಿಸಬೇಕೆಂದು ಉಳಿದ ಸಹ ನಟರು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೇನೋ ಎಂಬ ಅನುಮಾನ ಬರುವಂತಿದೆ ಆಕೆಯ ಹೇಳಿಕೆ. ಆದರೆ ಆಕೆ ಸಾಯುವ ದೃಶ್ಯವನ್ನು ಮಿಸ್ ಮಾಡಿಕೊಳ್ಳಬಾರದೆಂದು ಆ ಕಾರ್ಯಕ್ರಮವನ್ನು ಜನರು ನೋಡುತ್ತಾರೆ ಎಂದು ಆಕೆ ಭಾವಿಸಿರುವುದನ್ನು ನೋಡಿದರೆ ನಿಜಕ್ಕೂ ಕನಿಕರ ಉಂಟಾಗುತ್ತದೆ, ಬಣ್ಣದ ಲೋಕದವರ ಭ್ರಮೆಗಳ ಬಗ್ಗೆ. ಕುಳಿತು ನೋಡುವ ನಮ್ಮ ಬಗ್ಗೆಯೂ.

ಶನಿವಾರ, ಫೆಬ್ರವರಿ 21, 2009

ಹೆಸರೊಂದರ ಹೆಸರು

ಯಾನ್, ಆರವ್, ಮಯಾಸ್,ರೇನೀ...ಏನಿವು? ಹೆಸರೇ? ಯಾವ ಭಾಷೆಯವು? ಯಾವ ದೇಶದವು? ಈ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ತಲೆ ಹೋಳಾಗುವುದೆಂದು ಬೇತಾಳ ಪ್ರಶ್ನೆ ಕೇಳಿದ್ದರೆ ಬಹುಶಃ ರಾಜಾ ವಿಕ್ರಮನ ತಲೆಯೂ ಹೋಳಾಗುತ್ತಿತ್ತೇನೋ.ಹೆಸರಿನಲ್ಲೇನಿದೆ? ಎಂಬ ಪ್ರಶ್ನೆ ಹೊಸತಲ್ಲ. ಆದರೆ ಹೆಸರು ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಕಾಲಕಾಲಕ್ಕೂ ಬದಲಾಗುತ್ತಲೇ ಇರುತ್ತದೆ ಎನ್ನುವುದೂ ಸುಳ್ಳಲ್ಲ.
ಭೂಮಿ ಜಾಗತಿಕ ಹಳ್ಳಿಯಾಗಿರುವುದರ ಗುರುತಾಗಿಯೋ ಏನೋ ಈಗಿನ ಹೆಸರಿನ ಟ್ರೆಂಡ್ ಬದಲಾಗಿದೆ. ಎಲ್ಲಾ ವಿಷಯಗಳಲ್ಲೂ 'ಫ್ಯಾಷನ್ ಮೇಕರ್‍ಸ್' ಅಗಿರುವ ಸಿನಿಮಾ ನಟ,ನಟಿಯರು, ಕ್ರೀಡಾಪಟುಗಳು ತಮ್ಮ ಮಕ್ಕಳಿಗೆ ಇಡುತ್ತಿರುವ ಹೆಸರನ್ನು ಗಮನಿಸಿದರೆ ಅದರಲ್ಲಿ ಪ್ರಾದೇಶಿಕತೆ, ಅಥವಾ ಭಾರತೀಯತೆ ಕಾಣುವುದೇ ಇಲ್ಲ. (ವಿದೇಶಿ ಗ್ರಾಹಕರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಕಾಲ್ ಸೆಂಟರ್ ಕೂಸುಗಳು ಹೆಸರು ಬದಲಾಯಿಸಿಕೊಳ್ಳುವಂತೆ ಯೂನಿವರ್ಸ್‌ಲ್ ಹೆಸರುಗಳು ಹಾಲಿವುಡ್‌ಗೆ ಪಾಸ್‌ವರ್ಡ್ ಆಗುತ್ತವೆ ಎಂಬ ಕಾರಣವೇ?) ಅದನ್ನೂ ಒಳ್ಳೆಯ ರೀತಿಯಿಂದ ಹೇಳಬೇಕೆಂದರೆ ಇಂದಿನ ಹೆಸರುಗಳು ಜಾತ್ಯಾತೀತ, ಧರ್ಮಾತೀತ, ಭಾಷಾತೀತ, ದೇಶಾತೀತ ಆಗುತ್ತಿರುವುದು ಮಾತ್ರವಲ್ಲ ಲಿಂಗಾತೀತವೂ ಆಗುತ್ತಿವೆ! ಅವು ಅರ್ಥಾತೀತವೂ ಆಗಿದ್ದರೆ ಆಶ್ಚರ್ಯವೇನೂ ಇಲ್ಲ.
ಹೃತಿಕ್ ರೋಷನ್ 'ಕಹೋ ನಾ...' ಚಿತ್ರದ ಮೂಲಕ ಒಮ್ಮಿಂದೊಮ್ಮೆಲೆ ಜನಪ್ರಿಯನಾದಾಗ ಹಿರಿಯರೊಬ್ಬರು 'ಬಹುಶಃ ಅವನ ಹೆಸರು ಋತ್ವಿಕ್ ಎಂಬ ಹೆಸರಿನ ಅಪಭ್ರಂಶವಿರಬಹುದು' ಎಂದಿದ್ದರು. ಈಗ ಅದೇ ಹೃತಿಕ್ ರೋಷನ್ ಮಗನ ಹೆಸರು ಹ್ರೇಹಾನ್ ಎಂದು ತಿಳಿದರೆ ಏನೆನ್ನಬಹುದೋ? ಅವನಂತೆಯೇ ಅಂತರ್ಧರ್ಮೀಯ ವಿವಾಹವಾದ ಬಾಲಿವುಡ್ ಬಾದೂಷಾ ಶಾರುಕ್ ಖಾನ್ ತನ್ನ ಮಕ್ಕಳಿಗೆ ಆರ್ಯನ್, ಸುಹಾನಾ ಎಂಬ ಟಿಪಿಕಲ್ ಉತ್ತರ ಭಾರತೀಯ ಹೆಸರನ್ನು ಇಟ್ಟಿದ್ದೇ, ಆಶ್ಚರ್ಯದ ವಿಷಯ.
ಬಾಲಿವುಡ್‌ನ ಜನಪ್ರಿಯ ಖಾನ್‌ದಾನಿನ ಕುಡಿಯಾದ ಕರೀಷ್ಮಾ ಕಪೂರ್‌ಳ ಮಗಳ ಹೆಸರು ಸಮೈರಾ. ಹಾಗೆಂದರೆ ಏನು ಅರ್ಥ? ಯಾವ ಭಾಷೆಯ ಪದವೋ ಯಾರಿಗೂ ಗೊತ್ತಿಲ್ಲ. ಅಂತೆಯೇ ದಕ್ಷಿಣ ಭಾರತದ ಚೆಲುವೆ ಮಧುರಿ ದೀಕ್ಷಿತ್, ಶ್ರೀರಾಮ್ ನೆನೆ ಎನ್ನುವ ಡಾಕ್ಟರ್‌ರನ್ನು ಮದುವೆಯಾಗಿ ಅಮೆರಿಕ ಸೇರಿದ ಮೇಲೆ ಅಲ್ಲಿ ಯಾವ ಜನಾಂಗದ ಹೆಸರಿನಿಂದ ಆಕರ್ಷಿತರಾಗಿದ್ದರೋ, ತಮ್ಮ ಇಬ್ಬರು ಗಂಡುಮಕ್ಕಳಿಗೆ ಅರಿನ್ ಹಾಗೂ ರ್ಯಾನ್ ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಹೀಬ್ರೂ, ಅಥವಾ ಅರಾಬಿಕ್ ಭಾಷೆಯಲ್ಲಿ ಮಾತ್ರ ಅರ್ಥ ಸಿಕ್ಕೀತು !
ನೂತನ್, ತನುಜಾರಂಥವರ ಅಪ್ಪಟ ಪ್ರತಿಭೆ, ಚೆಲುವು ಎರಡನ್ನೂ ವಂಶಪಾರಾಂಪರ್‍ಯವಾಗಿ ದತ್ತು ತೆಗೆದುಕೊಂಡಂತೆ ಚೆಂದದ ಹೆಸರನ್ನೂ ಬಳುವಳಿಯಾಗಿ ಪಡೆದಾಕೆ ಕಾಜೋಲ್. ತನ್ನ ಸಹನಟ ಅಜಯ್ ದೇವಗನ್‌ನನ್ನು ಮದುವೆಯಾಗಿ ಹೆಣ್ಣು ಮಗುವನ್ನು ಪಡೆದಾಗ ಅದರ ಹೆಸರಿನ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಅದು ಗೊತ್ತಿದ್ದೇ ಕಾಜೋಲ್ ತನ್ನ ಮಗಳಿಗೆ ಹುಡುಕಿದ್ದು ಗ್ರೀಕ್ ಮೂಲದ ಹೆಸರು ನೀಸ ಎಂದು. ಹಾಗೆಂದರೆ ಗ್ರೀಕ್ ಭಾಷೆಯಲ್ಲಿ ಗುರಿ ಎಂದರ್ಥವಂತೆ !
೯೦ರ ದಶಕದ ಖ್ಯಾತ ನಾಯಕಿಯರಾಗಿದ್ದ ಶ್ರೀದೇವಿ (ಜಾಹ್ನವಿ, ಖುಷಿ) ಜೂಹಿ ಚಾವ್ಲಾ (ಜಾಹ್ನವಿ, ಅರ್ಜುನ್)ರಂಥವರು ತಮ್ಮ ಮಕ್ಕಳಿಗೆ ಸಾಂಪ್ರಾದಾಯಿಕ ಹೆಸರನ್ನಿಟ್ಟವರೇ. ೧೯೯೦ರಲ್ಲಿಯೇ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದ ರವೀನಾ ಟಂಡನ್ ಅವರಿಗೆ ಪೂಜಾ, ಛಾಯಾ ಎಂಬಂಥ ಹೆಸರನ್ನಿಟ್ಟಿದ್ದರೂ ಕಳೆದೆರಡು ವರ್ಷಗಳ ಹಿಂದೆ ಹುಟ್ಟಿದ ತಮ್ಮ ಸ್ವಂತ ಮಗುವಿಗೆ ಇಟ್ಟ ಹೆಸರು ರಷಾ ಎಂದು.
ಟ್ವಿಂಕಲ್ ಖನ್ನಾಳೊಂದಿಗೆ ಎರಡೆರಡು ಬಾರಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾದ ಅಕ್ಷಯ್ ಕುಮಾರ್ ತಮ್ಮ ಮಗನಿಗೆ ಇಟ್ಟ ಹೆಸರು ಆರವ್. ಸಿಮ್ರಾನ್ ಎಂಬ ಮುದ್ದು ಮುಖದ ತಮಿಳು ನಟಿಯ ಮುದ್ದು ಮಗನ ಹೆಸರು ಅಧೀಪ್. ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮಗುವೊಂದನ್ನು ದತ್ತು ತೆಗೆದುಕೊಂಡು ತಾನೇ ತಂದೆ ತಾಯಿ ಎರಡೂ ಆಗಿ(ಸಿಂಗಲ್ ಮದರ್) ಸಾಕುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಮಗುವಿಗೆ ಸುಶ್ಮಿತಾ ಕರೆದದ್ದು ರೇನಿ ಎಂದು. ಹಾಗೆಂದರೆ ಲ್ಯಾಟಿನ್ ಭಾಷೆಯಲ್ಲಿ ಪುನರ್ಜನ್ಮ ಎಂದರ್ಥವಂತೆ. ಫರ್ಹಾನ್ ಅಕ್ತರ್‌ಗಿರುವ ಎರಡು ಮಕ್ಕಳಲ್ಲಿಮೊದಲನೆಯ ಮಗುವಿನ ಹೆಸರು ಶಾಕ್ಯ ಎಂದಾದರೆ, ಎರಡನೆಯದರ ಹೆಸರು ಅಕೀರಾ. ಅಕೀರಾ ಎಂದರೆ ಜಪಾನೀ ಭಾಷೆಯಲ್ಲಿ ಬುದ್ಧಿವಂತ ಎಂದರ್ಥ. ಕನ್ನಡದ ನಂಬರ್ ವನ್ ಹಾಡುಗಾರ (!?) ಎನಿಸಿರುವ ಸೋನು ನಿಗಮ್‌ನ ಆರು ತಿಂಗಳ ಮಗುವಿನ ಹೆಸರು ನೇವಾನ್.
ಈ ವಿಷಯದಲ್ಲಿ ಕ್ರೀಡಾಪಟುಗಳೇನು ಹಿಂದೆ ಬಿದ್ದಿಲ್ಲ. ಸಂಜಯ್ ದತ್ತ ಮೊದಲನೆ ಹೆಂಡತಿ ರಿಯಾ ಪಿಳ್ಳೈಳನ್ನು ಮದುವೆಯಾಗಿದ್ದ ಲಿಯಂಡರ್ ಪೇಸ್ ತನ್ನ ಮಗುವನ್ನು ಶುದ್ದ ಅಮೆರಿಕನ್ ಇಂಗ್ಲೀಷ್‌ನಲ್ಲಿ ಅಯ್ನಾ ಎಂದು ಕರೆಯುತ್ತಾನೆ. ಆದರೆ ಯಾವ ಇಂಗ್ಲೀಷ್ ಶಬ್ದಕೋಶ ಹುಡುಕಿದರೂ ಅದರ ಅರ್ಥ ಮಾತ್ರ ಸಿಗುವುದಿಲ್ಲ. ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ, ತಮ್ಮ ಹೆಂಡತಿ ಚೇತನಾ ಮೊದಲನೆ ಮಗುವಿಗೆ ಅರುಣಿ ಎಂಬ ಅಪ್ಪಟ ಸಾಂಪ್ರದಾಯಿಕ ಹೆಸರಿದ್ದರೂ ತಮ್ಮ ಮಗುವಿಗೆ ಇಟ್ಟ ವಿಭಿನ್ನ ಹೆಸರು ಮಯಾಸ್.
ಹೀಗೆ ಮುಖ್ಯವಾಹಿನಿಯಲ್ಲಿ ಹೆಸರಿನ ಟ್ರೆಂಡ್ ಬದಲಾಗುತ್ತಿದ್ದರೂ ವಿರುದ್ಧ ಸೆಳೆತವೂ ಇದ್ದೇಇದೆ. ಮತ್ತೆ ಪಾಣಿನಿ, ಜೈಮಿನಿ, ವಿದ್ಯುಲ್ಲತಾ, ಅಚಿಂತ್ಯಾ, ಋತುಪರ್ಣ, ಸರ್ವಜಿತ್... ಮುಂತಾದ ಪೌರಾಣಿಕ, ಸಂಸ್ಕೃತ ಆದರೆ ಅನನ್ಯ ಹೆಸರನ್ನಿ ಡುವ ಪದ್ಧತಿಯೂ ನಿಧಾನವಾಗಿ ಹೆಚ್ಚಾಗುತ್ತಿದೆ. 'ದಿ ಟೆಲಿಗ್ರಾಫ್' 'ಏಷ್ಯನ್ ಏಜ್'ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್ರವರು ಒಬ್ಬ ಮುಸ್ಲಿಂ, ಮದುವೆಯಾಗಿದ್ದು ಮಲ್ಲಿಕಾ ಜೋಸೆಫ್ ಎಂಬ ಕ್ರಿಶ್ಚಿಯನ್‌ನನ್ನು. ಆದರೆ ತಮ್ಮ ಮಕ್ಕಳಿಗೆ ಇಟ್ಟ ಹೆಸರು ಮಾತ್ರ ಅಪ್ಪಟ ಸಂಸ್ಕೃತದ್ದು. ಮಗನ ಹೆಸರು ಪ್ರಯಾಗ್(ಎರಡು ನದಿಗಳು ಸೇರುವ ಪವಿತ್ರ ಸ್ಥಳ), ಮಗಳು ಮುಕುಲಿತಾ (ಮುಕುಲಿತಾ ಎಂದರೆ ಜೋಗುಳವೆಂದರ್ಥ).
ಸಾಹಿತ್ಯಾಸಕ್ತರಿಗಂತೂ ಮಕ್ಕಳಿಗೆ ಹೆಸರನ್ನಿಡುವುದೂ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ. ಕುವೆಂಪುರವರೇ ತಮ್ಮ ಮಕ್ಕಳಿಗೆ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ ಮುಂತಾದ ಅಪರೂಪದ ಹೆಸರನ್ನಿಟ್ಟು ಮೇಲ್ಪಂಕ್ತಿ ಹಾಕಿದ್ದರು. ತೇಜಸ್ವಿ ಅದನ್ನು ಮುಂದುವರಿಸಿ ತಮ್ಮ ಮಗಳಿಗೆ ಈಶಾನ್ಯ ಎಂದು ಹೆಸರಿಟ್ಟಿದ್ದರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ತಮ್ಮ ಮಗಳಿಗೆ ಹೂ ಎಂದು ಹೆಸರಿಟ್ಟಾಗ ಜನ ಹುಬ್ಬೇರಿಸಿದರು. ಮೊನ್ನೆ ತಾನೆ ಅಗಲಿದ ಚಿ. ಶ್ರೀನಿವಾಸರಾಜುರವರು ತಮ್ಮ ಮಕ್ಕಳಿಗೆ ಋತ, ಸುಗತ ಎಂದೂ, ಮೊಮ್ಮಕ್ಕಳಿಗೆ ರಾಕೇಂದು, ಸುಮೇರು, ವಿಯತಾ ಎಂಬ ವಿಶಿಷ್ಟ ಹೆಸರನ್ನುಗಳನ್ನು ಆರಿಸಿ ಇಟ್ಟಿದ್ದರು. ರೈತ ಹೋರಾಟಗಾರ ಕಡಿದಾಳ್ ಶಾಮಣ್ಣನವರ ಮಕ್ಕಳು ಉಲೂಪಿ, ಲಾಜವಂತಿ. ಚಿಂತಾಮಣಿ ಕೊಡ್ಲೆಕೆರೆ ಮಗಳು ಕುಂಕುಮ. ಹಿರಿಯ ಗಾಂಧೀವಾದಿ ಸುರೇಂದ್ರ ಕೌಲಗಿಯವರ ಮೊಮ್ಮಗನದು ಸಮನಸ್ ಎಂಬ ಹೆಸರು. ನಟರಾಜ್ ಹುಳಿಯಾರ್ ಆಫ್ರಿಕನ್ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಹುಟ್ಟಿದ ಮಗನಿಗೆ ಆಫ್ರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವೋಲೆ ಶೋಯಿಂಕಾ ಹೆಸರೇ ಇಟ್ಟಿದ್ದಾರೆ. ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ, ತಮ್ಮ ಮಗನೂ ಸಂಗೀತದ ಸಾಥ್ ನೀಡಲೆಂದೇ ಏನೋ ಷಡ್ಜ ಎಂದು ಕರೆದಿದ್ದಾರೆ. ನೀನಾಸಂ ಸುಬ್ಬಣ್ಣ ತಮ್ಮ ಮಗನಿಗೆ ಅಕ್ಷರ ಎಂದು ಹೆಸರಿಟ್ಟು ತಮ್ಮ ಅಕ್ಷರಪ್ರೀತಿಯನ್ನು ತೋರ್ಪಡಿಸಿದ್ದರೆ, ಗಾಯಕ ಶಿವಮೊಗ್ಗ ಸುಬ್ಬಣ್ಣ ತಮ್ಮ ಮಗಳಿಗೆ ಬಾಗೇಶ್ರೀ ಎಂಬ ತಮ್ಮ ಇಷ್ಟವಾದ ರಾಗದ ಹೆಸರೇ ಇಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೆಸರು ಸ್ವಲ್ಪ ವಿಚಿತ್ರವಾಗಿದೆ ಎಂದು ಕೆಲವರಿಗಾದರೂ ಅನಿಸಿರಲಿಕ್ಕೇಬೇಕು. ರಾಬ್ಡಿ ಎಂದರೆ ಅರ್ಥವೇನೋ ಗೊತ್ತಿಲ್ಲ, ಅವರ ಮನೆಯ ಸಂಪ್ರದಾಯ ತಿಳಿದರೆ ಇವರ ಹೆಸರಿನ ಅರ್ಥವನ್ನು ಸುಲಭವಾಗಿ ಊಹಿಸಬಹುದು. ಮಗು ಹುಟ್ಟಿದ ಕೂಡಲೆ ತಾಯಿಗೆ ಇಷ್ಟವಾದ ತಿಂಡಿಯನ್ನು ತಿನ್ನಲು ಕೊಡುತ್ತಾರಂತೆ, ಆನಂತರ ಅದೇ ತಿಂಡಿಯ ಹೆಸರನ್ನು ಮಗುವಿಗೆ ಇಡುತ್ತಾರೆ. ಆದ್ದರಿಂದಲೇ ರಾಬ್ಡಿ ತಂಗಿಯರ ಹೆಸರು ಜಿಲೇಬಿ, ರಸಗುಲ್ಲಾವಾ, ಪಾನ್ವಾ.
ರಾಬ್ಡಿ ದಂಪತಿಗೆ ಹುಟ್ಟಿದ ಮಕ್ಕಳ ಹೆಸರುಗಳೂ ಸ್ವಾರಸ್ಯಕರವಾಗೇ ಇವೆ. ರಾಬ್ಡಿಗೆ ಮೊದಲ ಮಗು ಹುಟ್ಟಿದಾಗ ವಿದ್ಯಾರ್ಥಿ ನಾಯಕನಾಗಿದ್ದ ಲಾಲೂಪ್ರಸಾದ್ ಮೀಸಾ ಕಾಯ್ದೆಯಡಿ ಜೈಲು ಸೇರಿದ್ದರು. ಅದರ ನೆನಪಿಗಾಗೇ ಆ ಮಗುವಿಗೆ ಮೀಸಾ ಎಂದೇ ಹೆಸರಿಟ್ಟರು. ಎರಡನೆಯ ಮಗಳು ಚುನು ಹುಟ್ಟಿದ್ದು ಲೋಕಸಭೆ ಚುನಾವ್(ಚುನಾವಣೆ)ಗೆ ಲಾಲೂ ಸ್ಪರ್ಧಿಸಿದ್ದಾಗ. ಚಂದ್ರಗ್ರಹಣ ಆದ ಸಮಯದಲ್ಲಿ ಹುಟ್ಟಿದ್ದಕ್ಕಾಗಿ ಮೂರನೇ ಮಗಳಿಗೆ ಚಂದಾ ಎಂದೇ ಕರೆದರು. ಹೀಗೆ ರಾಬ್ಡಿ-ಲಾಲೂ ದಂಪತಿಯ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳ ಹೆಸರುಗಳಿ ಹಿಂದೆಯೂ ಒಂದೊಂದು ಕತೆಯೇ ಇದೆ.
ಹಕ್ಕಿಪಿಕ್ಕಿ ಜನಾಂಗದಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಅಲ್ಲಿ ಮಗುವಿಗೆ ಹೆಸರಿಡಬೇಕೆಂದರೆ ಹೆಸರು ಹುಡುಕಬೇಕಾದದ್ದೇ ಇಲ್ಲ. ಯಾವುದು ಕಣ್ಣಿಗೆ ಕಾಣುತ್ತದೋ, ಯಾವ ಪದ ಅವರಿಗೆ ಗೊತ್ತಿದೆಯೋ ಅವುಗಳಲ್ಲಿ ಯಾವುದಾದರೂ ಹೆಸರಾಗಬಹುದು. ಹಾಗಾಗಿ ಅಲ್ಲಿ ಬಸ್ಸು , ಕಾರು, ಹೋಟೆಲ್, ಬೆಂಗಳೂರು, ರಥ, ಗಾಳಿ, ಮಾವಿನ ಮರ, ಹೀಗೆ ಎಲ್ಲವೂ ಹೆಸರುಗಳೇ. ಒಮ್ಮೆ ಹಿತಕಿದ ಬೇಳೆ ಎಂಬ ಹೆಸರಿನ ಕಳ್ಳನೊಬ್ಬ ಜೈಲು ಸೇರಿದನೆಂಬ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದುದು ಆ ಹೆಸರಿನಿಂದಾದರೂ ಕೆಲವರಿಗೆ ನೆನಪಿರಬಹುದು. ಆತನೂ ಇದೇ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವನೆ.
ಹಾಗೆಂದು ಅನೂಹ್ಯ ಹೆಸರಿಡುವುದು ಕೇವಲ ಬುಡಕಟ್ಟು ಜನಾಂಗಗಳಷ್ಟೇ ಅಲ್ಲ, ಈ ಖಯಾಲಿ ಮೆಟ್ರೋ ನಗರಗಳಲ್ಲೂ ಇದೆ. ಕಾಸ್ಮೋಪಾಲಿಟನ್ ಜಗತ್ತನ್ನು ಹಸಿಹಸಿಯಾಗಿಯೇ ತೆರೆದಿಡುವ ಬರಹಗಾರ ನಾಗರಾಜ ವಸ್ತಾರೆಯವರ ಕತೆಗಳಲ್ಲಿನ ಹೆಸರುಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕೇಸರಿ,ಹಿಮ, ಗುಬ್ಬಿ, ತಾವರೆ, ಮುಗುಳ್,ಕೇತಕಿ, ನಿಯತಿ, ಓಜಸ್, ಶಚಿ, ರಿಷಬ್, ತಪತಿ, ಯಗಚಿ,ಅಭೀಪ್ಸಾ, ಉಚ್ಛ್ರಾಯ, ಸ್ಯಾಂರ್ಯಾಮ್(ಸಂಪಂಗಿರಾಮ), ಜೇಜಿ, ವೀವ್, ಸಾತ್ವತಿ, ಸುಶಿರ್, ಇನೇಶ್...
ಮಲ್ಲಿಗೆಗೆ ಬೇರೆ ಯಾವ ಹೆಸರಿನಿಂದ ಕರೆದರೂ ಅದರ ಪರಿಮಳ ಬದಲಾಗದು ನಿಜ. ಆದರೆ ,'ಪುಃ' ಎಂದು ಬಿಟ್ಟುಸಿರೆ ತಾನೆ ಹೆಸರಾಯ್ತು' ಎಂದು ಕವಿ ಬೇಂದ್ರೆ ಹೂ ಎಂಬ ಪದ ಹುಟ್ಟಿದ ಬಗ್ಗೆ ಹೇಳಿದ್ದರಲ್ಲೇ ಅದರ ಸಂಬಂಧವೂ ಕಂಡುಬಿಡುತ್ತದೆ. ಒಟ್ಟಿನಲ್ಲಿ ಮೂಲ ಎಲ್ಲಿಯದೇಇರಲಿ, ಅರ್ಥ ಇರಲಿ,ಬಿಡಲಿ,ಹೆಸರು ಮಾತ್ರ ವಿಭಿನ್ನವಾಗಿ ವಿಶಿಷ್ಟವಾಗಿರಲಿ (ವಿಚಿತ್ರವಾಗಿದ್ದರೂ ಪರವಾಗಿಲ್ಲ) ಎಂಬ ಹೆಸರು ಆರಿಸುವವರ ಆಶಯ ಈ ಟ್ರೆಂಡ್ ಹಿಂದೆ ಇರುವುದು ಸ್ಪಷ್ಟ.
(ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ-2008)

ಶುಕ್ರವಾರ, ಫೆಬ್ರವರಿ 20, 2009

ನಾವು ಹುಡುಗಿಯರೇ ಹೀಗೆ...


ನಾವು ಹುಡುಗಿಯರೇ ಹೀಗೆ: ನಮ್ಮ ವರ್ತನೆಯಲ್ಲಿ ಯಾವುದೂ ನೇರವಲ್ಲ. ನೇರವಾಗಿರುವುದು ನಮ್ಮ ಲಕ್ಷಣವಲ್ಲ. ಮಾತನಾಡುತ್ತೇವಾದರೂ ಹೇಳಬೇಕಾದದ್ದನ್ನು ಹೇಳುವುದಿಲ್ಲ, ಮತ್ತು ಅದನ್ನು ಹೇಳಲೂಬಾರದು ಎಂದುಕೊಂಡಿರುತ್ತೇವೆ. ಈ ಎದೆಯಾಳದ ವಿಚಿತ್ರ ಭಾವವನ್ನೇ ಕೇಳುವವರು ಅರ್ಥಮಾಡಿಕೊಳ್ಳಲಿ ಎಂಬ ಆಸೆ ನಮ್ಮದು. ಅರ್ಥವಾದಾಗ ಅವರ ಕಣ್ಣು ಮಿನುಗುತ್ತಲ್ಲ, ವಿಜಯದ ಭಾವದಿ ಬೀಗುತ್ತಲ್ಲ, ಅದನ್ನ ಕಾಣುವಾಸೆ ನಮ್ಮದು. ಅವರು ಹೀಗೆ ಗೆಲ್ಲಲಿಕ್ಕಾಗಿಯೇ ಆಟವನ್ನು ಹೂಡಿ, ಅದರಲ್ಲಿ ಗೆಲುವನ್ನು ಅವರ ಪಾಲಿಗೆ ಎತ್ತಿಟ್ಟು, ಅವರು ಮೀಸೆ ತಿರುಗಿಸುವಾಗ ಕದ್ದುನೋಡಿ ಸಂಭ್ರಮಿಸಿ "ಗೆದ್ದಿದ್ದು ನಿನ್ನಿಂದಾಗಿಯೇ ಹುಡುಗಿ'ಎನ್ನಲಿ ಎಂದು ಕಾದು ಕೂರುವವರು ನಾವು.
ನಾವು ಹುಡುಗಿಯರೇ ಹೀಗೆ: ಸದಾ ಯಾರನ್ನೋ ಹುಡುಕುತ್ತಿರುತ್ತೇವೆ, ಅವರಿಲ್ಲದ ಊರಲ್ಲೂ. ಆದರೆ ಅವರೇ ಎದುರಿಗೆ ಬಂದಾಗ ತಲೆ ತಗ್ಗಿಸಿಬಿಡುತ್ತೇವೆ, ನೋಡುವ ಬಯಕೆ ಬೆಟ್ಟದಷ್ಟಿದ್ದರೂ. ಬಣ್ಣ ಬಣ್ಣದ ಕನಸು ಕಟ್ಟುತ್ತೇವೆ. ಹಗಲೂರಾತ್ರಿ ಅದನ್ನೇ ನೆನೆದು ಸಂಭ್ರಮಿಸುತ್ತೇವೆ. ಆದರೆ ಅದನ್ನು ಸಾಧಿಸಿಕೊಳ್ಳುವುದಕ್ಕಿಂತ ಇನ್ನೊಬ್ಬರ ಕನಸನ್ನು ನನಸು ಮಾಡುವುದೇ ಕರ್ತವ್ಯ ವೆಂದುಕೊಂಡುಬಿಡುತ್ತೇವೆ. . ಅರ್ಧವಾಗೇ ಉಳಿದ ಕನಸನ್ನೂ ಹೊರಚೆಲ್ಲದೆ ಕಣ್ಣಲ್ಲಿ ಹಾಗೇ ಬಚ್ಚಿಟ್ಟುಕೊಂಡುಬಿಡುತ್ತೇವೆ, ನಿದ್ದೆಗೂ ಅಲ್ಲಿ ಜಾಗವಿಲ್ಲದಂತೆ...
ನಾವು ಹುಡುಗಿಯರೇ ಹೀಗೆ: ಹೂವು, ಚಿಟ್ಟೆ, ಚುಕ್ಕಿ, ಚಂದ್ರಮ, ಬೆಳ್ಳಿ, ಬಂಗಾರ ಏನನ್ನು ಕಂಡರೂ ನಮಗೆ ಆಸೆ, ಪ್ರೀತಿ. ನಾವೇ ನೆಟ್ಟ ಗುಲಾಬಿ ಗಿಡದಲ್ಲಿ ಮೊಗ್ಗು ಹೂವಾಗುತ್ತಿದೆಯೆಂದು ರಾತ್ರಿಯಿಡೀ ಕಾದು ಕುಳಿತು ನೋಡುವವರು ನಾವು. ಅಂಗೈಯಲ್ಲಿ ಮುಚ್ಚಿಟ್ಟ ದೀಪದಂತೆ ನೋಡಿಕೊಳ್ಳುವವರಿದ್ದರೂ ಸುರಿವ ಮಳೆಯಲ್ಲಿ ಇನ್ಯಾರನ್ನೋ ಹುಡುಕಿಕೊಂಡು ಹೊರಟುಬಿಡಬಲ್ಲೆವು. ಗಣಿತದಲ್ಲಿ ನೂರು ಅಂಕಗಳಿಸಿದ್ದರೂ ಬದುಕಿನ ಗಳಿಕೆಯ ಏಣಿಸಲೂ ಹೋಗದ, "ಇಷ್ಟಾದರೂ ಕೊಟ್ಟರಲ್ಲ' ಎಂಬ ತೃಪ್ತಿಗೆ ಎಷ್ಟಾದರೂ ಎತ್ತಿ ನೀಡುವವರು ನಾವು. ಬಸ್‌ನಲ್ಲಿ ಕುಳಿತಿರುವಾಗ ಯಾರದ್ದೋ ಮಗುವನ್ನು ಕರೆದು ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುವಂತೆ ಯಾರದ್ದೋ ಸೋಲನ್ನೂ ಮಗುವಂತೆ ಎತ್ತಿ ಮುದ್ದಿಸಿ ನಗಿಸಿ, ಕೈಬೀಸಿ ಕಳಿಸಿಕೊಡಬಲ್ಲೆವು.
ನಾವು ಹುಡುಗಿಯರೇ ಹೀಗೆ: ಸ್ವಾತಂತ್ರ್ಯಕ್ಕಾಗಿ ಬಡಿದಾಡಿ, ಬಂಡೆದ್ದು ಮನೆ ಬಿಟ್ಟು ನಡೆದುಬಿಡುತ್ತೇವೆ, ಇನ್ಯಾರದೋ ತೋಳಬಂಧನಕ್ಕೆ. ನಾಚಿಕೆಯ ಮುಳ್ಳಂತೆ ನಾಚಿ ರೆಪ್ಪೆ ಮುಚ್ಚುವ ನಾವು ಒಮ್ಮೊಮ್ಮೆ ಸಿಡಿದೆದ್ದು ಮುಳ್ಳು ಚುಚ್ಚುವುದೂ ಉಂಟು. ಸ್ವಾಭಿಮಾನದ ಕೆಚ್ಚು ಮನದಲ್ಲಿದ್ದರೂ ಸಮರ್ಪಣೆಯ ಸುಖವೂ ಗೊತ್ತು. ಇನ್ನೂ ಪುಟ್ಟ ಮಗು ಎಂದು ನೀವು ಮುದ್ದಿಸುತ್ತಿರುವಾಗಲೇ "ನನಗೊಂದು ಮಗು ಬೇಕು’ ಎಂದು ಕೇಳಿದರೆ ಬೆಚ್ಚಿ ಬೀಳದಿರಿ. ನಾವು ಹುಡುಗಿಯರೇ ಹೀಗೆ...