ಗುರುವಾರ, ಆಗಸ್ಟ್ 20, 2009

ಆರತಿ ಎತ್ತಿರೇ ಕಳ್ ಗಣಪಂಗೆ...



ಶ್.... ಗಣಪತಿ ಬಪ್ಪಾ.... ಮೋರ್ಯಾ...
ಕೈಲಿದ್ದ ಗಣಪತಿಯನ್ನು ಕಂಡವರ ಮನೆ ಮುಂದೆ ಇಟ್ಟು ಹೀಗೆ ಜೋರಾಗಿ ಒಮ್ಮೆಲೆ ಕೂಗಿ ಎದ್ದುಬಿದ್ದು ಓಡಿಬಿಡುತ್ತಿತ್ತು ನಮ್ಮ ಗುಂಪು. ಅರೆ ಕ್ಷಣ ನಮ್ಮ ಗಣಪತಿ ಅಲ್ಲಿ ಅನಾಥ. ಮರು ಕ್ಷಣದಲ್ಲೇ ಆ ಮನೆಯ ಬಾಗಿಲು ತೆರೆಯುತ್ತಿತ್ತು. ನೋಡಿದರೆ ಎದುರಿಗೇ ಸಾಕ್ಷಾತ್ ಗಣಪತಿ. ಹಬ್ಬದ ದಿನ ಬಾಗಿಲಿಗೆ ಬಂದ ಗಣಪತಿಯನ್ನು ಹಾಗೆ ಕಳಿಸುವುದಕ್ಕಾಗುತ್ತದೆಯೇ? ಆರತಿ ಮಾಡಿ ಒಳಗೆ ಕೊಂಡೊಯ್ದು ಮಂಟಪ, ನೈವೇದ್ಯಕ್ಕೆ ಸಿದ್ಧ ಮಾಡಿಕೊಳ್ಳಬೇಕು. ಪಾಪ! ಕಣ್ಣು ತಿಕ್ಕಿಕೊಳ್ಳುತ್ತಾ ಹೊರಗೆ ಬಂದಿದ್ದ ಮನೆಯೊಡೆಯನ ನಿದ್ದೆ ಅದೆಲ್ಲಿ ಹಾರಿಹೋಗುತ್ತಿತ್ತೋ?

ಗಣಪತಿ ತಯಾರಿಸುವ ಕಿಟ್ಟಣ್ಣ ಇನ್ನೂ ಮಣ್ಣು ತಂದಿರುತ್ತಿದ್ದನೋ ಇಲ್ಲವೋ. ನಮ್ಮ ಹುಡುಗರ ಗುಂಪಂತೂ ಶ್ರಾವಣ ಮಾಸ ಪ್ರಾರಂಭವಾದಾಗಲಿಂದ ಬಹಳ ರಹಸ್ಯವಾಗಿ, ಮತ್ತು ಅಷ್ಟೇ ಶ್ರದ್ಧೆಯಿಂದ ಕಳ್ಳ ಗಣಪತಿ ತಯಾರಿಸಲು ಕೂತುಬಿಡುತ್ತಿತ್ತು. ಗಣಪತಿ ಮಾಡಲು ಸರಿಯಾಗಿ ಬಾರದಿದ್ದರೂ ಅದಕ್ಕೆ ದೊಡ್ಡ ಕಿರೀಟ, ಉದ್ದ ಸೊಂಡಿಲು, ದಪ್ಪ ಹೊಟ್ಟೆ ಇಟ್ಟು ಹೇಗೋ ಮೂರ್ತಿಯೊಂದನ್ನು ಮಾಡಿಬಿಡುತ್ತಿದ್ದೆವು. ಯಾರದ್ದೋ ಮನೆಗೆ ಹಚ್ಚಲು ತಂದಿರುವ ಬಣ್ಣವನ್ನು ಕದ್ದುತಂದು ಆ ಮೂರ್ತಿಗೆ ಹಚ್ಚಿದರೆ... ಆಹಾ! ಗಣಪತಿ ಸಿದ್ಧ. ಅದು ದೊಡ್ಡವರಿಗೆ ಕಾಣದಂತೆ ಕಾಯುವ, ಸುರಿವ ಮಳೆಯಿಂದ ಕಾಪಾಡುವ ಹೊಣೆ ಬೇರೆ. ಹಬ್ಬಕ್ಕೆ 2-3 ದಿನವಿದ್ದಾಗ ಹುಡುಗರ ಗುಂಪು ರಹಸ್ಯ ಸಭೆ ಸೇರಿ ಯಾರ ಮನೆಯಲಿ ಗಣಪತಿ ಇಡಬೇಕೆಂಬ ತೀರ್ಮಾನ ಕೈಗೊಳ್ಳುತ್ತಿತ್ತು. ಸಾಮಾನ್ಯವಾಗಿ ಮಾವಿನ ಕಾಯಿ ಕೊಯ್ಯಲು ಬಿಡದ, ಮಕ್ಕಳಿಗೆ ಬೈಯುವ, ತೀರಾ ಜುಗ್ಗತನ ತೋರುವ, ಗಣಪತಿ ಹಬ್ಬ ಮಾಡದ ಮನೆಯೊಂದನ್ನು ಆರಿಸಿಕೊಳ್ಳಲಾಗುತ್ತಿತ್ತು. ಹಬ್ಬದ ದಿನ ಬೆಳಗ್ಗೆ ನಾಲ್ಕು-ನಾಲ್ಕೂವರೆಗೆ ಎದ್ದು ಎಲ್ಲರೂ ಸೇರಿ ಯಾರಿಗೂ ಗೊತ್ತಾಗದಂತೆ ಆ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಆ ಮನೆಯ ಬಾಗಿಲಲ್ಲಿ ಇಟ್ಟು ....ಗಣಪತಿ ಬಪ್ಪಾ...ಮೋರ್ಯಾ..

ಪಾಪ! ಹಬ್ಬಕ್ಕೆಂದು ಯಾವ ತಯಾರಿಯನ್ನೂ ಮಾಡಿಕೊಂಡಿರದ ಆ ಮನೆಯವರ ಸ್ಥಿತಿ ಅಂದು ದೇವರಿಗೇ ಪ್ರೀತಿ. ಒಂದೆಡೆ ನಮ್ಮನ್ನು ಬೈಯುತ್ತಾ... ಇನ್ನೊಂದೆಡೆ ಆವತ್ತಿನ ಪೂಜೆಗೆ ಪುರೋಹಿತರನ್ನು ಕರೆಸುವ, ಅಡುಗೆಗೆ ದಿನಸಿ ತರುವುದರ ಜತೆಗೆ ಒಂದು ವರ್ಷ ಗಣಪತಿ ಇಟ್ಟವರು ಕನಿಷ್ಠ ಮೂರು ವರ್ಷ ಇಡಲೇ ಬೇಕು ಎಂಬ ಅಲಿಖಿತ ನಿಯಮದ ಯೋಚನೆ. ಮೂರು ವರ್ಷ ಗಣಪತಿ ತಂದು ಪೂಜೆ ಮಾಡಿ ಅಭ್ಯಾಸವಾದರೆ ಆನಂತರ ಎಂದೂ ಗಣಪತಿ ಹಬ್ಬವನ್ನು ಬಿಡುವುದಿಲ್ಲವೆಂಬುದು ನಮ್ಮ ನಂಬಿಕೆ.

ಸಂಜೆ 21 ಗಣಪತಿ ನೋಡಬೇಕೆಂದು ಮನೆ ಮನೆಗೆ ತಿರುಗಲು ಹೊರಡುತ್ತಿದ್ದ ನಮ್ಮ ಗುಂಪಿಗೆ ಕಳ್ಳ ಗಣಪತಿ ಇಟ್ಟಿರುವ ಮನೆಗೆ ಹೋಗಲು ಭಾರಿ ಸಂಭ್ರಮ. "ಅವಸರಕ್ಕೆ ಮಾಡಿದ್ದಾದರೂ ಪಂಚಕಜ್ಜಾಯ ತುಂಬಾ ರುಚಿ ಇದೆ ಮರಾಯ್ರೇ' ಎಂದು ಅವರನ್ನು ಕಿಚಾಯಿಸುವುದು ಬೇರೆ. ನಮ್ಮನ್ನು ಕೊಂದು ಬಿಡುವಷ್ಟು ಕೋಪ ಉಕ್ಕಿಬರುತ್ತಿದ್ದರೂ ಅವರು ಏನೂ ಮಾಡುವಂತಿಲ್ಲ. ಏಕೆಂದರೆ ನಮ್ಮ ಗಣಪತಿ ಅಲ್ಲೇ ನಗುತ್ತಿರುತ್ತಾನಲ್ಲ!

ಶನಿವಾರ, ಆಗಸ್ಟ್ 15, 2009

ಹಳೇ ಚಿತ್ರಕೆ ಹೊಸ ದಾರಿ

ಅದು 1895-96ರ ಸಮಯ. ಎದುರಿನ ದೊಡ್ಡ ಪ್ರೊಜೆಕ್ಟರ್‌ನಲ್ಲಿ ಕಂಡ ಬೃಹತ್ ರೈಲು ಚಲಿಸುತ್ತಾ ತಮ್ಮೆಡೆಗೆ ಹಾದು ಬಂದದನ್ನು ಕಂಡು ಪ್ರೇಕ್ಷಕರು ಹೌಹಾರಿದರು. ತಮ್ಮ ಮೇಲೆಯೇ ಹರಿಯಲಿದೆ ಎಂದು ಎದ್ದು ಓಡಿದರು. ಅವರ ಭಯಕ್ಕೂ ಕಾರಣವಿತ್ತು. ಅದು ಲೂಮಿಯರ್ ಸಹೋದರರ 'ನಿಲ್ದಾಣಕ್ಕೆ ಆಗಮಿಸುತ್ತಿರುವ ರೈಲು' (Arrival of a Train at La Ciotat)ಚಲನ ಚಿತ್ರದ ಮೊದಲ ಪ್ರದರ್ಶನವಾಗಿತ್ತು. ಅದುವರೆಗೂ ಸ್ಥಿರ ಚಿತ್ರಗಳನ್ನು ಮಾತ್ರ ನೋಡಿದ್ದ ಪ್ರೇಕ್ಷಕರು ಚಿತ್ರದಲ್ಲಿರುವ ರೈಲು ತಮ್ಮೆದುರು ಚಲಿಸಿದಾಗ ಉದ್ವೇಗಕ್ಕೆ ಒಳಗಾಗಿದ್ದು ಸಹಜವೇ.

40-50 ಸೆಕೆಂಡುಗಳ ವಿವಿಧ ಚಲನ ದೃಶ್ಯಗಳನ್ನು ಸೆರೆ ಹಿಡಿದು, ಅದನ್ನು ನೋಡಲು ಟಿಕೆಟ್ ಇಟ್ಟಿದ್ದ ಲೂಮಿಯರ್ ಸಹೋದರರು "ಈ ಹೊಸ ಸಂಶೋಧನೆಗೆ ಭವಿಷ್ಯವಿಲ್ಲ' ಎಂದು ತೀರ್ಮಾನಿಸಿ, ತಮ್ಮ ಗಮನವನ್ನು ಕಲರ್ ಫೋಟೊಗ್ರಫಿಯ ಕಡೆ ತಿರುಗಿಸಿಕೊಂಡರಂತೆ. ಅಂಥ ಅದ್ಭುತ ಪ್ರತಿಭಾವಂತರ ಲೆಕ್ಕವೂ ತಪ್ಪಾಗುವಂತೆ ಇಂದು ಸಿನಿಮಾ ಬೃಹತ್ ಉದ್ಯಮವಾಗಿ ಬೆಳೆದುನಿಂತಿದೆ.

ಲೂಮಿಯರ್ ಸಹೋದರರ ಚಿತ್ರಗಳ ಪ್ರದರ್ಶನಕ್ಕೂ ಮೊದಲೇ ಹಲವರು ಚಲಿಸುವ ಚಿತ್ರಗಳನ್ನು ರೂಪಿಸಲು ಪ್ರಯತ್ನ ಪಟ್ಟಿದ್ದರು. 1878ರಲ್ಲೇ ಎಡ್ವರ್ಡ್ ಮೇಬ್ರಿಡ್ಜ್ ಎಂಬಾತ "ಚಲಿಸುತ್ತಿರುವ ಕುದುರೆ'ಯ ಚಿತ್ರವನ್ನು ಸೆರೆ ಹಿಡಿದಿದ್ದ. ಕುದುರೆಯ ಹಾದುಬರುವ ದಾರಿಯಲ್ಲಿ 12 ಕ್ಯಾಮೆರಾಗಳನ್ನು ಸಾಲಿಗಿಟ್ಟಿದ್ದ. ಕುದುರೆಯ ಪ್ರತಿ ಹೆಜ್ಜೆಗೂ ಒಂದೊಂದು ವೈಯರು ಜೋಡಿಸಿ ಪ್ರತಿ ಕ್ಯಾಮೆರಾ ಕ್ಲಿಕ್ಕಿಸುವಂತೆ ಮಾಡಿದ್ದ. ಅವನ ಪ್ರಯತ್ನ ಯಶಸ್ವಿಯಾಗಿತ್ತು.



ಲೂಯಿ ಲೆ ಪ್ರಿನ್ಸ್ ಎಂಬುವವನು 1888ರಲ್ಲಿ "ರಾಂಡೆ ಗಾರ್ಡನ್ ಸೀನ್' ಚಿತ್ರೀಕರಿಸಿದ್ದ. ಬ್ರಿಟನ್ನಿನ ಶ್ರೀಮಂತ ವಿಟ್ಲೆ ಕುಟುಂಬದವರು ತಮ್ಮ ಮನೆಯ ಮುಂದಿನ ಉದ್ಯಾನದಲ್ಲಿ ನಗುತ್ತಾ ಸಂಚರಿಸುವ ದೃಶ್ಯವದು. ಸಿಂಗಲ್ ಲೆನ್ಸ್‌ನಲ್ಲಿ ತೆಗೆದ ನಾಲ್ಕು ಫ್ರೇಮಿನಲ್ಲಿರುವ ಈ ಚಿತ್ರ ಕೇವಲ ಎರಡು ಸೆಕೆಂಡಿಗೆ ಮುಗಿದು ಹೋಗುತ್ತದೆ. ಈಗಲೂ ನೋಡಲು ಸಾಧ್ಯವಿರುವ ಅತಿ ಹಳೆಯ ಚಲನಚಿತ್ರ ಎಂಬ ದಾಖಲೆಯೂ ಇದಕ್ಕಿದೆ.

ಇಂಥ ಅಪರೂಪದ ಹಳೆಯ ಚಿತ್ರಗಳನ್ನು ಇದುವರೆಗೂ ನಾವು ನೀನಾಸಂನಲ್ಲೋ, ಆಥವಾ ಯಾವುದಾದರೂ ಫಿಲ್ಮ್ ಸೊಸೈಟಿ ನಡೆಸಿಕೊಡುವ ಸಿನಿಮಾ ರಸಗ್ರಹಣ ಶಿಬಿರಗಳಲ್ಲೋ ಮಾತ್ರ ನೋಡುತ್ತಿದ್ದೆವು. ಆದರೆ ಈಗ ಅವುಗಳೆಲ್ಲಾ ಯೂಟ್ಯೂಬ್‌ನಲ್ಲಿಯೇ ಲಭ್ಯವಿದೆ! ಲೂಮಿಯರ್ ಸಹೋದರರು,ಎಡ್ವರ್ಡ್ ಮೇಬ್ರಿಡ್ಜ್, ಲೂಯಿ ಲೆ ಪ್ರಿನ್ಸ್ ಹೀಗೆಯೇ ಹುಡುಕಿದರೆ ಅವರ ಇನ್ನೂ ಹಲವಾರು ಚಿತ್ರಗಳು ನಿಮ್ಮೆದುರು ಕಾಣುತ್ತವೆ. ನೋಡ್ತೀರಲ್ವಾ?

ಸೋಮವಾರ, ಆಗಸ್ಟ್ 3, 2009

ತಕ್ಕಡಿಯಲ್ಲಿ ಎರಡು ಹಾಡು

ಕಳೆದೆರಡು ವಾರಗಳಲ್ಲಿ ಇಬ್ಬರು ದಿಗ್ಗಜರ ಅಗಲಿಕೆಯಿಂದಾಗಿ ಸಂಗೀತ ಕ್ಷೇತ್ರ ಬಡವಾಗಿದೆ. ಒಂದೆಡೆ ಮೈಕೆಲ್ ಜಾಕ್ಸನ್‌ನ ಸಾವು ಪಾಪ್ ಸಂಗೀತ ಲೋಕದ ಅಬ್ಬರವನ್ನು ತಣ್ಣಗಾಗಿಸಿದ್ದರೆ ಇನ್ನೊಂದೆಡೆ ಗಂಗೂಬಾಯಿ ಹಾನಗಲ್‌ರ ನಿಧನ ಶಾಸ್ತ್ರೀಯ ಸಂಗೀತ ಲೋಕವನ್ನು ಮಂದ್ರದಲ್ಲಿ ನಿಲ್ಲಿಸಿದೆ. ಇಬ್ಬರೂ ಮಹಾನ್ ಪ್ರತಿಭಾವಂತರೇ. ಅಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ತೂಗಲು ನನ್ನ ತಕ್ಕಡಿಗೆ ಸಾಮರ್ಥ್ಯವೇ ಇಲ್ಲ. ಇಬ್ಬರೂ ತಮ್ಮ ತಮ್ಮ ಮಿತಿಗಳನ್ನು ಅರಿತು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಧನೆಯ ಶಿಖರ ಮುಟ್ಟಿದವರು. ಕೀರ್ತಿಯ ಸವಿಯ ಉಂಡವರು.ಆದರೆ ಸಾವಿನ ಬೆಳಕು ಅವರಿಬ್ಬರ ಬದುಕಿನ ಶೈಲಿಯ ಅಂತರವನ್ನು ಕಣ್ಣಿಗೆ ರಾಚುವಂತೆ ತೆರೆದಿಟ್ಟುಬಿಟ್ಟಿದೆ.

ಮೂಳೆಗಳೇ ಇಲ್ಲವೆನೋ ಎಂಬಂತೆ ಮೈಡೊಂಕಿಸಿ ಕುಣಿಯುತಿದ್ದ ಮೈಕೆಲ್‌ನ ಮೈಯಲ್ಲಿ ಸಾಯುವ ವೇಳೆಗೆ ಮೂಳೆಯಲ್ಲದೇ ಬೇರೇನು ಇರಲಿಲ್ಲ. ಹೊಟ್ಟೆಯಲ್ಲಿ ಒಂದಗಳು ಅನ್ನಕ್ಕೂ ಜಾಗವಿಲ್ಲದಂತೆ ಮಾತ್ರೆಗಳೇ ತುಂಬಿದ್ದವಂತೆ. ಬರಬಾರದ ರೋಗಗಳನ್ನೆಲ್ಲಾ ತಂದುಕೊಂಡು ತನ್ನ ಐವತ್ತನೇ ವರ್ಷದಲ್ಲಿಯೇ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ. ೯೭ ವರ್ಷದ ತನಕ ಹಾಡುತ್ತಲೇ ಜೀವನ ಸಾಗಿಸಿದ ಗಂಗಜ್ಜಿಗೆ ವಯಸ್ಸಾಗಿತ್ತೇ ಹೊರತು ಆರೋಗ್ಯಕ್ಕೇನೂ ಕೊರತೆಯಾಗಿರಲಿಲ್ಲ. "ನಾಳೆ ಊಟ ಮಾಡಲು ನಾನಿರುವುದಿಲ್ಲ. ಊಟ ತರಬೇಡವೋ" ಎಂದು ಅಪ್ಪಣೆ ಕೊಟ್ಟೇ ವಿದಾಯ ಹೇಳಿದ ನಿಶ್ಚಿಂತೆ. ಚಿರನಿದ್ರೆಯಲ್ಲಿದ್ದ ಅವರ ಮುಖ ನೋಡಿದರೆ ಸಾವೂ ಸಹ ಅವರ ಬಳಿ ತಲೆಬಾಗಿ ಬಂದಿತ್ತು ಎಂಬುದು ಯಾರಿಗಾದರೂ ತಿಳಿಯುವಂತಿತ್ತು.

ತನ್ನ ಅಂದಚೆಂದಗಳಿಗೆ ಅಪಾರ ಗಮನ ಕೊಡುತ್ತಿದ್ದ ಮೈಕೆಲ್‌ನ ದೇಹಕ್ಕೆ ಇನ್ನೂ ಸರಿಯಾದ ರೀತಿಯಲ್ಲಿ ಅಂತ್ಯ ಸಂಸ್ಕಾರವೇ ಆಗಿಲ್ಲ. ಅವನ ಖ್ಯಾತಿ, ಕುಖ್ಯಾತಿ ಎರಡನ್ನೂ ಬಿತ್ತರಿಸಿದ್ದ ಮಧ್ಯಮಗಳಿಗೆ ಅವನ ಸಾವನ್ನೂ ಸೆನ್ಸೇಷನ್ ಮಾಡುವ ಅವಕಾಶ. ಆದರೆ ನೆಮ್ಮದಿಯುತ ಜೀವನ ನಡೆಸಿದ ಗಂಗಜ್ಜಿ ಕೊನೆಯ ತನಕ ಅಜಾತಶತ್ರು. ಪ್ರಾಯದಲ್ಲೂ ಹಳಿಕೊಳ್ಳುವಂಥ ಚಂದಗಾತಿಯಲ್ಲದಿದ್ದರೂ ಜೀವನ ಮುಗಿಸಿದ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ಗುಣವಂತೆ.

ಕೋಟಿಗಟ್ಟಲೇ ಹಣವನ್ನು ಡಾಲರ್ ಲೆಕ್ಕದಲ್ಲಿ ಗಳಿಸುತ್ತಿದ್ದ ಮೈಕೆಲ್ ತೀರಿಕೊಂಡಾಗ ಆತನಿಗಿದ್ದ ರೋಗದ ಪಟ್ಟಿಯಂತೆಯೇ ಸಾಲದ ಪಟ್ಟಿಯೂ ದೊಡ್ಡದಿತ್ತು. "ಗಳಿಸಿದ ದುಡ್ಡು ಹೋದದ್ದೆಲ್ಲಿ?' ಎಂಬುದು ಅವನ ಅಭಿಮಾನಿಗಳ ಪ್ರಶ್ನೆ. ಗಂಗಜ್ಜಿಯೂ ಬಡತನದಲ್ಲೇ ಬೆಳೆದವರು. ಸಾಲ ತೀರಿಸಲು ಮೈಮೇಲಿನ ಒಡವೆ ಮಾರಿದವರು. ಆದರೆ ಅವರ ಮನೆ ಬೇರೆಯವರ ಪಾಲಾಗುವ ಸಂದರ್ಭದಲ್ಲಿ ಸಾಲ ಕೊಟ್ಟವನು ಬಂದು "ನಿಮಗೆ ಸಾಧ್ಯವಾದಾಗ ಕೊಡಿ ತಾಯಿ" ಎಂದು ಕೈಮುಗಿದು ಹೋದನಂತೆ. "ಅವರು ಗಳಿಸಿದ್ದು ಈ ಅಭಿಮಾನವನ್ನೇ' ಎಂದು ಉತ್ತರಿಸಿತ್ತಾರೆ ಅವರನ್ನು ತಿಳಿದವರು.

ಲಕ್ಷಾಂತರ ಜನರ ಅರಾಧ್ಯ ದೈವವಾಗಿದ್ದ ಮೈಕೆಲ್‌ನ ಕೊನೆಗಾಲದಲ್ಲಿ ಅವನ ಮೈಯ ಬಣ್ಣ , ತಲೆಯ ಕೂದಲು, ಮೂಗು, ಮುಖದ ಆಕಾರ ಯಾವುದೂ ನಿಜವಾಗಿರಲಿಲ್ಲ, ಕೊನೆಗೆ ಅವನ ಮಕ್ಕಳೂ ಅವನದಾಗಿ ಉಳಿಯಲಿಲ್ಲ. ಆದರೆ ಕೆಲವೇ ಕೇಳುಗರಿರುವ ಶಾಸ್ತ್ರೀಯ ಸಂಗೀತದ ಸೇವೆ ಮಾಡಿದ ಗಂಗೂಬಾಯಿ ಎಂಬಾಕೆ ಹಾಡು ಮುಗಿಸುವಷ್ಟರಲ್ಲಿ ಕೇಳುಗರೆಲ್ಲಾ ಮಕ್ಕಳಾಗಿದ್ದರು. ನಾಡಿನ ಜನರಿಗೆಲ್ಲಾಆಕೆ "ಗಂಗೂ ತಾಯಿ' ಯಾಗಿದ್ದರು.