ಶುಕ್ರವಾರ, ಜುಲೈ 24, 2009

ಅಂತೂ ಇಂತೂ ಶ್ರಾವಣ ಬಂತು!

ಅಬ್ಬಾ! ಅಂತೂ ಆಷಾಢ ಮುಗಿಯಿತು ! ಈ ನಿರಾಳತೆಯ ನಿಟ್ಟುಸಿರೆಳೆಯಲು ಕಾದ ದಿನಗಳೆಷ್ಟು? ಎಲ್ಲರೂ ಕ್ಯಾಲೆಂಡರ್ ನೋಡಿ ಒಂದೇ ತಿಂಗಳು ಎನ್ನುತ್ತಾರೆ. ಇವರೆಲ್ಲಾ ಗಡಿಯಾರದ ಸೆಕೆಂಡಿನ ಮುಳ್ಳು ತಿರುಗುವುದು ನೋಡುವುದೇ ಇಲ್ಲವೆನಿಸುತ್ತದೆ. ಆ ಮುಳ್ಳೋ, ಯಾರೋ ಕಾಯುವವರೇ ಹಾಗೆಂದು ಹೆಸರಿಟ್ಟಿರಬೇಕು, ನಿಧಾನವಾಗಿ ಚಲಿಸುತ್ತಾ ಪದೇ ಪದೆ ನೋಡುವ ಕಣ್ಣಿಗೆ ಮುಳ್ಳಾಗಿ ಚುಚ್ಚುತ್ತಿರುತ್ತದೆ.
ನನಗಾದರೂ ಏನು ಗೊತ್ತು, ಹೀಗೆ ಆಗುತ್ತದೆಯೆಂದು. ಆಷಾಢ ಪ್ರಾರಂಭವಾಗುವ ನಾಲ್ಕು ದಿನ ಮೊದಲೇ ನಾನು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದೆನಲ್ಲ. "ಹೇಗಿರುವೆಯೇ ಹುಡುಗಿ, ನನ್ನ ಬಿಟ್ಟು?’ ಎಂಬ ಪಿಸುಮಾತಿನ ಪ್ರಶ್ನೆ ನನ್ನ ಸಂಭ್ರಮದಲ್ಲಿ ಕಿವಿಗೇ ತಾಕಿರಲಿಲ್ಲ. ಅಣ್ಣ ಬಂದು ಕರೆಯುತ್ತಿದ್ದಂತೆ ಊರಿಗೆ ಹಾರಿಬಿಟ್ಟಿದ್ದೆ.
ಮೊದಲೆರಡು ದಿನ ಏನೆಲ್ಲಾ ಸಂಭ್ರಮ, ಅಮ್ಮನೊಡನೆ ಮಾತನಾಡುವಾಗ ’ನಮ್ಮನೆ’ ಅಂತ ಯಾವುದಕ್ಕೆ ಹೇಳಬೇಕೋ ಗೊತ್ತಾಗದೆ ಹೇಳಿ ನಾಲಿಗೆ ಕಚ್ಚಿಕೊಳ್ಳುತ್ತಿದ್ದೆನಲ್ಲ. ಆದರೆ ಮೂರನೆಯ ದಿನ ಸುರಿದ ಮಳೆಗೆ ಫೋನ್ ಡೆಡ್ ಆಯ್ತಲ್ಲ, ಆಗಲೇ ಶುರುವಾಗಿದ್ದುದು ನಿಜವಾದ ಆಶಾಢ. ಐದನೇ ದಿನ ಕಳೆಯುವಷ್ಟರಲ್ಲಿ ಕಣ್ಣು ಕ್ಯಾಲೆಂಡರ್ ಹುಡುಕುತ್ತಿತ್ತು. ಮನಸಿನಲ್ಲಾಗಲೇ ಶ್ರಾವಣನ ಬಯಕೆ.

ರಚ್ಚೆ ಹಿಡಿವಂತೆ ಸುರಿವ ಮಳೆಯನ್ನು ನೋಡುತ್ತಾ ಕುಳಿತಿರುವಾಗೇಕೋ ಕೆ.ಎಸ್.ನ ರವರ ’ತೌರ ಸುಖದೊಳಗೆನ್ನ ಮರೆತಿಹೆನು ಎನ್ನದಿರಿ, ನಿಮ್ಮ ಪ್ರೇಮವ ನೀವೇ ಒರೆಯಲಿಟ್ಟು’ ಹಾಡು ಅಚಾನಕ್ಕಾಗಿ ಬಾಯಿಗೆ ಬಂದಿದ್ದಾದರೂ ಹಗಲಿನಲಿ ನೆನಪು ಹಿಂಡುವುದು, ಇರುಳಿನಲಿ ಕನಸು ಕಾಡುವುದು ಸುಳ್ಳಾಗಿರಲಿಲ್ಲವಲ್ಲ. ಆಮೇಲೆ ತಾನೆ ತುಳಸಿಗೆ ನಮಸ್ಕರಿಸುವಾಗ ಪಕ್ಕದಲ್ಲಿ ಕೃಷ್ಣನಿರುವುದೂ, ಆಕಾಶ ನೋಡುವಾಗ ಜೋಡಿ ನಕ್ಷತ್ರ ನಗುತ್ತಿರುವುದೂ, ಕ್ಯಾಲೆಂಡರ್‌ನಲ್ಲಿರುವ ದೇವರೆಲ್ಲರೂ ದಂಪತ್ ಸಮೇತ ಕುಳಿತಿರುವುದೂ ಕಣ್ಣಿಗೆ ಬೀಳತೊಡಗಿದ್ದುದು. ಆಮೇಲೇನು? ’ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...’
ಅಮ್ಮನ ಥರಾವರಿ ಉಂಡೆಗಳ ಸಿದ್ಧತೆ, ಮಕ್ಕಳು ಬಾಗಿಲಿಗೆ ಜೋಕಾಲಿ ಕಟ್ಟತೊಡಗಿದ್ದು "ತೌರ ಪಂಜರದೊಳಗೆ ಸೆರೆಯಾದ ಗಿಳಿ’ಗೆ ಕಂಡಿದ್ದೇ ಉಸಿರು ಬಂದಂತಾಗಿಬಿಟ್ಟಿತು. ಇನ್ನೇನು ಶ್ರಾವಣ ದೂರವಿಲ್ಲ. ಆದರೂ ಬಾಗಿಲಿಗೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಎಷ್ಟು ಜೋರಾಗಿ ಚಿಮ್ಮಿದರೂ ಹೊರಗೆ ಹೋದಂತಾಗುತ್ತದೆ ಅಷ್ಟೇ, ಆದರೆ ಮತ್ತೆ ಅಷ್ಟೇ ಒಳ ತಳ್ಳುತ್ತದೆ...ನಿರಾಶೆಯ ಮಡುವಿಗೆ.
ಇಲ್ಲ, ಅದೇನು ನಿರಂತರವಲ್ಲ, ಯಾವುದೋ ಒಂದು ಆಶಾಢದ ರಾತ್ರಿಗಾದರೂ ಶ್ರಾವಣದ ಬೆಳಗು ಕಾಯುತ್ತಿರುತ್ತದೆಯಂತೆ. ಅದೇ ಕನಸಿನಲ್ಲಿ ಬೆಳಗಾಗಿ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದಾನಲ್ಲ ಶ್ರಾವಣ. ಅವನೊಂದಿಗೆ ನಗುತ್ತಿರುವ ಹಬ್ಬಗಳ ಕಲರವ...

ಮಂಗಳವಾರ, ಜುಲೈ 7, 2009

ನಮ್ಮೂರಿನ ಮರಗಳೆಲ್ಲ ನಮ್ಮ ಮನೆಯೊಳಗೇ ಇದ್ದವು!


ಮೊದಲು ನಮ್ಮ ಮನೆಯೂ ಹಾಗೇ ಇತ್ತು, ಎಲ್ಲರ ಮನೆಗಳಂತೆ. ಭವ್ಯವಾದ ಬಾಗಿಲು, ಕುಸುರಿ ಕಲೆಯಿಂದ ಮೆರೆಯುತ್ತಿರುವ ಕರಿ ಮರದ ಮಂಚ, ಸುಂದರ ದೀವಾನ್ ಕಾಟ್, ಸಿಂಹಾಸನದಂತಿರುವ ಕುರ್ಚಿಗಳು, ಫೋನ್ ಇಡಲೊಂದು ಪುಟಾಣಿ ರೋಸ್‌ವುಡ್ ಟೇಬಲ್, ಕಂಪ್ಯೂಟರ್ ಇಡುವುದಕ್ಕೆ ಮತ್ತೊಂದು. ಮನೆಯ ಪ್ರತಿ ಕಿಟಕಿಗೆ, ಪ್ರತಿ ತಿರುವಿಗೆ ಮರದ ಚೌಕಟ್ಟು. ಗಾಜಿನ ಶೋಕೇಸಿನ ಅಂದ ಹೆಚ್ಚಿಸಲು ಇನ್ನಷ್ಟು, ಮನೆಯ ಘನತೆ ಹೆಚ್ಚಿಸಲು ಮತ್ತಷ್ಟು...
ಅವತ್ತೊಂದು ದಿನ ಊರಿಂದ ಅಪ್ಪ ಬಂದಿದ್ದರು. ಅವರೊಂದಿಗೇ ಟೀಕ್‌ವುಡ್‌ನ ಹೊಚ್ಚ ಹೊಸ ಡೈನಿಂಗ್ ಟೇಬಲ್ ಮನೆಗೆ ಬಂದಿತ್ತು. ಇನ್ನಿಲ್ಲದ ಪ್ರೀತಿಯಿಂದ ಅಪ್ಪನಿಗೆ ಕಾಫಿ ಮಾಡಿಕೊಟ್ಟು, ನಾನೂ ಕಾಫಿ ಕುಡಿಯುತ್ತಾ ಕುಳಿತಿದ್ದೆ. ಅಪ್ಪನೊಡನೆ ಊರಿನ ಬಗ್ಗೆ ವಿಚಾರಿಸುತ್ತಾ ಕುಳಿತಿದ್ದೆನಾದರೂ ಕಣ್ಣು ನಸುಗೆಂಪು ಬಣ್ಣದಿಂದ ಫಳಫಳ ಹೊಳೆಯುವ ಹೊಸ ಡೈನಿಂಗ್ ಟೇಬಲ್‌ನ ಅಂದ ಚಂದದ ಮೇಲೇ ನೆಟ್ಟಿತ್ತು. ಇಲ್ಲಿ ಸಿಗುವ ರೆಡಿಮೇಡ್ ಫರ್ನಿಚರ್ ಬಿಟ್ಟು ಊರಿಂದಲೇ ತರಿಸಿಕೊಳ್ಳುವ ನನ್ನ ನಿರ್ಧಾರಕ್ಕೆ ನಾನೇ ಮನಸ್ಸಿನಲ್ಲಿಯೇ ಶಹಭಾಶ್‌ಗಿರಿ ಕೊಟ್ಟುಕೊಳ್ಳುತ್ತಿದ್ದೆ. ಅಪ್ಪ ಸಹ ನನ್ನ ಅರಳಿದ ಮುಖ ನೋಡಿ ಖುಷಿಯಾಗಿದ್ದರು. ಮನೆಯ ಮುಂದಿದ್ದ ತೇಗದ ಮರವನ್ನು ಕಡಿದು ಅದರಲ್ಲೇ ಡೈನಿಂಗ್ ಟೇಬಲ್ ಮಾಡಿಸಿದ್ದರಿಂದ ಗುಣಮಟ್ಟದ ಬಗ್ಗೆ ಅನುಮಾನವೇ ಇಲ್ಲ ಎಂದು ಹೆಮ್ಮೆಯಿಂದ ಅಪ್ಪ ಹೇಳಿದರು. ಮರುಕ್ಷಣವೇ ಎದೆ ಝಗ್ ಅಂದಿತು. ಹಾಗಾದರೆ, ಅಂಗಳದ ಪಕ್ಕದ ಬೇಲಿಗೆ ಅಂಟಿಕೊಂಡಂತಿದ್ದ ತೇಗದ ಮರ ಇನ್ನಿಲ್ಲವಾ?
ನಾನು ಚಿಕ್ಕವಳಿದ್ದಾಗಲಿಂದಲೂ ಆ ಮರ ಅಲ್ಲೇ ಇತ್ತು. ಆದರೆ ಹೂವು ಹಣ್ಣು ಬಿಡದ, ಆಟವಾಡಲು ಸಾಕಷ್ಟು ಟೊಂಗೆಗಳೂ ಇಲ್ಲದ ಮರ ಯಾವ ಮಕ್ಕಳಿಗೆ ತಾನೇ ಇಷ್ಟವಾಗತ್ತೆ? ಅದೇ ಕಾರಣದಿಂದ ಅದರತ್ತ ಯಾವ ಮಕ್ಕಳೂ ತಿರುಗಿ ಕೂಡ ನೋಡುತ್ತಿರಲಿಲ್ಲ. ಆದರೂ ಅದರಲ್ಲಿ ನನಗೊಂದು ಆಕರ್ಷಣೆ ಇತ್ತು. ಅದರ ಎಳೆಯ ಎಲೆಯೊಂದನ್ನು ಹಿಡಿದು ಅದರ ತೊಟ್ಟಿನಿಂದ ಅಂಗೈ ಮೇಲೆ ಗೀಚಿಕೊಂಡರೆ ಆರೇಂಜ್ ಸ್ಕೆಚ್ ಪೆನ್ನಿನಿಂದ ಬರೆದ ಹಾಗೆ ಬಣ್ಣ ಮೂಡುತ್ತಿತ್ತು. ಮದರಂಗಿ ಎಲೆ ಕೊಯ್ದು ತಂದು, ಅದನ್ನು ರುಬ್ಬಿ, ಗಂಟೆಗಟ್ಲೆ ಕೈ ಮೇಲೆ ಇಟ್ಟುಕೊಂಡು ರಂಗಾಗುವುದನ್ನು ಕಾಯುವಷ್ಟು ಸಹನೆ ಇಲ್ಲದ ನನಗೆ ತತ್‌ಕ್ಷಣ ಬಣ್ಣ ಮೂಡಿಸುವ ಈ ಎಲೆ ಕಂಡರೆ ಏನೋ ಖುಷಿ. ಕೆಲವೊಮ್ಮೆ ಅಂತೂ ನಾಜೂಕಾಗಿ ಚಿತ್ರ ಬಿಡಿಸಿಕೊಳ್ಳುವಷ್ಟೂ ತಾಳ್ಮೆ ಇಲ್ಲದೆ ಎಳೆಯ ಎಲೆ ಕಿತ್ತುಕೊಂಡು ಅಂಗೈ ಮೇಲಿಟ್ಟು ಉಜ್ಜಿಬಿಡುತ್ತಿದ್ದೆ. ಎರಡೂ ಕೈ ತುಂಬಾ ಬಣ್ಣದೋಕುಳಿ!
ಆ ಮರ ಇನ್ನಿಲ್ಲ. ನನ್ನ ಕೈಗೆ ಮದರಂಗಿಯ ಬಣ್ಣ ತುಂಬುತ್ತಿದ್ದ ಮರವನ್ನು ನನಗಾಗಿ ಕಡಿಯಲಾಗಿದೆ. ಈ ಯೋಚನೆ ಬಂದಿದ್ದೇ ತಡ, ಮೈ ಜುಮ್ಮೆಂದಿತು. ಮನೆಯೊಳಗೆ ಒಮ್ಮೆ ಕುಳಿತಲ್ಲಿಯೇ ಹಾಗೇ ಸುಮ್ಮನೆ ಕಣ್ಣಾಡಿಸಿದೆ.... ನಮ್ಮೂರಿನ ಮರಗಳೆಲ್ಲಾ ನಮ್ಮ ಮನೆಯಲ್ಲೇ ಸತ್ತು ಬಿದ್ದಿವೆ...ಹಾಗೂ ನಾನವುಗಳ ಹೆಣದ ಮೇಲೆ ಕುಳಿತು ಕಾಫಿ ಕುಡಿಯುತಿದ್ದೇನೆ!